ಉಜ್ವಲ ಸಾಧನೆ-ಗಟ್ಟಿ ವ್ಯಕ್ತಿತ್ವ ``ದೇವಿ`` ಪುರುಷೋತ್ತಮ ಭಟ್ಟರು
ಲೇಖಕರು : ಡಾ. ಎಂ. ಪ್ರಭಾಕರ ಜೋಶಿ
ಶುಕ್ರವಾರ, ಒಕ್ಟೋಬರ್ 24 , 2014
|
ಆರೋಗ್ಯಪೂರ್ಣ ಶತಾಯುಷ ಕಂಡು ಅಗಲಿದ ನಮ್ಮ ನಡುವಿನ ಓರ್ವ ಶ್ರೇಷ್ಠ ಕಲಾವಿದ ಕಡಂದೇಲು ಪುರುಷೋತ್ತಮ ಭಟ್ಟರದು ಕಂಡವರ- ಒಡನಾಟದವರ ಚಿತ್ತದಲ್ಲಿ ಅಚ್ಚು ಹೊಡೆದು, ಅಚ್ಚುಮೆಚ್ಚಾಗಿಯೇ ನಿಂತ ವ್ಯಕ್ತಿತ್ವ.
|
ಕಾಸರಗೋಡು- ಪುತ್ತೂರು ಗಡಿಭಾಗದ ಆರ್ಲಪದವು ಬಳಿಯ ವೆಂಕಟರಮಣ ಭಟ್ಟರ ಪುತ್ರರು ಪುರುಷೋತ್ತಮ ಭಟ್ಟರು. ವೆಂಕಟರಮಣ ಭಟ್ಟರು ಸಂಸ್ಕೃತ ವಿದ್ವಾಂಸ, ಊರಿನ ಶಾಲಾ ಸ್ಥಾಪಕ ಸಂಚಾಲಕರಾಗಿದ್ದವರು. ಬಾಲ್ಯ, ತಾರುಣ್ಯಗಳಲ್ಲಿ ಭಟ್ಟರು ಹಿರಿಯ ಬಲಿಪ ಭಾಗವತ, ಪಡ್ರೆ ಶ್ರೀಪತಿ ಶಾಸ್ತ್ರಿ, ಪಡ್ರೆ ಚಂದು, ಸ್ತ್ರೀ ವೇಷದ ಗಣಪತಿ ಭಟ್ಟರು, ಐತಪ್ಪ ಶೆಟ್ಟಿ ಮೊದಲಾದ ಅನೇಕರ ಕಿರಿಯ ಒಡನಾಡಿ, ಶಿಷ್ಯ. ಶೇಣಿ, ಅಳಕೆ, ಸಾಮಗ, ಅಗರಿ ಸಹಿತ ದೊಡ್ಡ ಕಲಾವಿದರ ತಂಡ ಇವರ ಹಿರಿಕಿರಿಯ ಸಹವರ್ತಿಗಳು. ಇವರ ಮಧ್ಯೆ ತನ್ನ ಪ್ರತ್ಯೇಕ ಪ್ರಭೆಯಿಂದ ಕಾಣಿಸಿದ ಭಟ್ಟರನ್ನು ಸ್ತ್ರೀಪಾತ್ರಧಾರಿಯಾಗಿಯೇ ಹೆಚ್ಚು ಗುರುತಿಸುತ್ತಾರಾದರೂ ಹಲವು ಬಗೆಯ ವೇಷಗಳಲ್ಲಿ ಅವರು ಸಮರ್ಥರೆನಿಸಿದವರು. ಶೇಣಿ-ಪುರುಷೋತ್ತಮ ಭಟ್ಟರ ತುರುಸಿನ ವಾಗ್ವಾದಗಳು ಆಗಿನ ದೊಡ್ಡ ಸುದ್ದಿಗಳು.
ದೇವೀ ಭಟ್ಟರೆ೦ದೇ ಖ್ಯಾತಿ
1940ರ ದಶಕದಲ್ಲಿ ಕಟೀಲಿನಲ್ಲಿ ನೆಲೆನಿಂತ ಭಟ್ಟರು ಕಟೀಲು ಪುರುಷೋತ್ತಮ ಭಟ್ಟರೆನಿಸಿದರು. ಪಡ್ರೆ, ಧರ್ಮಸ್ಥಳ, ಇರಾ ಕುಂಡಾವು, ಕಟೀಲು ಮೇಳಗಳಲ್ಲಿ ಸುಮಾರು ನಾಲ್ಕು ದಶಕ ತಿರುಗಾಟ. ವಿವಿಧ ರೀತಿಯ ಸ್ತ್ರೀ ಪಾತ್ರಗಳನ್ನು ಭಟ್ಟರು ಚೆನ್ನಾಗಿ ನಿರ್ವಹಿಸಿದ್ದರು. ಶ್ರೀದೇವೀ ಮಹಾತ್ಮೆಯ ದೇವಿಯಾಗಿ ಅವರು ಪಡೆದ ದೊಡ್ಡದಾದ ಖ್ಯಾತಿ, ಅಭಿಮಾನಗಳು ಅವರನ್ನು ದೇವೀ ಪುರುಷೋತ್ತಮ ಭಟ್ಟರೆನ್ನಿಸಿದವು. ಇದರಿಂದ ಅವರಿಗೆ ಒದಗಿದ ಪ್ರಸಿದ್ಧಿ ಅವರ ಯಶಸ್ವಿಯಾದ ಹಲವು ಪಾತ್ರಾಭಿವ್ಯಕ್ತಿಗಳಿಗೆ "ಅನ್ಯಾಯ' ಎಸಗಿತೆನಿಸುತ್ತದೆ. ಭಟ್ಟರ ಅಂಬೆ, ದ್ರೌಪದಿ, ಕೈಕೆ, ಮೇನಕೆ ಮೊದಲಾದವು ಉತ್ಕೃಷ್ಟ ರಚನೆಗಳಾಗಿದ್ದುವು. ತೀವ್ರ ಭಾವ, ದಿಟ್ಟತನ, ಹೆಣ್ಣಿನ ಛಲ, ಹೋರಾಟಗಳ ಅಭಿವ್ಯಕ್ತಿಯಲ್ಲಿ ಭಟ್ಟರದು ಹಿರಿದಾದ ಸಿದ್ಧಿ.
ಪುರುಷ ಪಾತ್ರಕ್ಕೂ ಸೈ
ತನ್ನ ಐವತ್ತರ ಹರೆಯದ ಬಳಿಕ ಪುರುಷ ಪಾತ್ರಗಳನ್ನು ಹೆಚ್ಚಾಗಿ ನಿರ್ವಹಿಸಲಾರಂಭಿ ಸಿದರು. ಅಕ್ಷಯಾಂಬರ ಪ್ರಸಂಗದ ಧರ್ಮರಾಜ, ಪಟ್ಟಾಭಿಷೇಕದ ದಶರಥ, ಪರ್ವದ ಭೀಷ್ಮ, ಕರ್ಣ ಪರ್ವದ ಶಲ್ಯ, ಗದಾಪರ್ವದ ಸಂಜಯ, ಹರಿಶ್ಚಂದ್ರ ಪ್ರಸಂಗದ ವಿಶ್ವಾಮಿತ್ರ, ವಸಿಷ್ಠ - ಇವು ಅವರ ಹೆಸರಾಂತ ಪಾತ್ರಗಳು.
ಒಳ್ಳೆಯ ಭಾಷೆ, ಚೊಕ್ಕ ಸ್ಪುಟ ಅಭಿವ್ಯಕ್ತಿ, ಮನಮುಟ್ಟುವ ಭಾವ, ತೀವ್ರ ರಸಾವಿಷ್ಕಾರಗಳು ಅವರಲ್ಲಿದ್ದುವು. ಸಂಸ್ಕೃತ -ಕನ್ನಡಗಳ ಅಧ್ಯಯನದಿಂದ ಅವರ ಭಾಷೆ ಪುಷ್ಟವಾಗಿತ್ತು. ವಾದ ಸಂವಾದ ವಿಧಾನ ಹದವಾಗಿತ್ತು. ಅಗತ್ಯವಾದರೆ ಬಿಗಿಪಟ್ಟು ಹಿಡಿದು ವಾದಿಸುತ್ತಿದ್ದ ಅವರು ತಾಳಮದ್ದಳೆಗಳಲ್ಲೂ ಸಮರ್ಥ ಅರ್ಥಧಾರಿ. ಸ್ವಭಾವ ಚಿತ್ರಣಕ್ಕೆ ಅವರ ಪ್ರಾಥಮ್ಯ.
|
ಕಡಂದೇಲು ಪುರುಷೋತ್ತಮ ಭಟ್ಟ |
|
ಜನನ |
: |
ನವ೦ಬರ್ 5, 1913 |
ಜನನ ಸ್ಥಳ |
: |
ಪಾಣಾಜೆ ಗ್ರಾಮ
ಪುತ್ತೂರುತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಮೂಲ್ಕಿ, ಕೊರಕ್ಕೋಡು, ಕೂಡ್ಲು, ಕಟೀಲು, ಇರಾ-ಕುಂಡಾವು ಮೇಳಗಳಲ್ಲಿ ಕಲಾವಿದರಾಗಿ ದುಡಿಮೆ.
|
ಪ್ರಶಸ್ತಿಗಳು:
ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಬೆಳುವಾಯಿಯ ಶ್ರೀ ಯಕ್ಷ ದೇವ ಪ್ರಶಸ್ತಿ, ಕಟೀಲು ದೇವಸ್ಥಾನ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ
|
ಮರಣ ದಿನಾ೦ಕ |
: |
ಜುಲೈ 5, 2014 |
|
|
ಉತ್ತಮ ಆರೋಗ್ಯ ಇರುತ್ತ, ಇನ್ನೂ ಹತ್ತಾರು ವರ್ಷ ತಿರುಗಾಟ ಮಾಡಬಹುದಾದ ವಯಸ್ಸಿನಲ್ಲಿ ಅಂದರೆ, ಐವತ್ತೆಂಟರ ಹರೆಯದಲ್ಲಿ ಅವರು ವೃತ್ತಿರಂಗದಿಂದ ದೂರವಾದರು. "ಸಾಕೆನಿಸಿತು, ನಿಲ್ಲಿಸಿದೆ' ಎನ್ನುತ್ತಿದ್ದರು. ಅಪ್ರಸ್ತುತನಾಗುವ ಮೊದಲು, ದೂರ ಸರಿಯಬೇಕೆಂಬ ಅವರ ನಿಲುವು ಅದಕ್ಕೆ ಮುಖ್ಯ ಕಾರಣವಿದ್ದಿರಬೇಕು.
ಎಲ್ಲರೊಂದಿಗೆ ಗೌರವದ ವ್ಯವಹಾರದಿಂದ ಬೆರೆಯುವ ಭಟ್ಟರು ಖಚಿತ ನಿಲುವು, ಕಟ್ಟುನಿಟ್ಟು ವ್ಯವಹಾರ, ಶಿಸ್ತುಗಳಿಂದ ಜತೆಗಾರರ ಆದರ ಪಾತ್ರರಾಗಿದ್ದರು. ಅವರ ಸಹವರ್ತಿ ಡಾ| ಕೋಳ್ಯೂರು ರಾಮಚಂದ್ರರಾಯರ ಮಾತಿನಲ್ಲಿ, ""ಪುರುಷೋತ್ತಮ ಭಟ್ಟರು ರಂಗಕ್ಕೂ ಬಿಡಾರಕ್ಕೂ ಒಡನಾಟಕ್ಕೂ ಬೇಕಾದ ವ್ಯಕ್ತಿ. ಕಲಾವಿದರ ಗೌರವಕ್ಕೆ ಚ್ಯುತಿ ಬಂದರೆ ಅದಕ್ಕೆ ಪ್ರತಿಭಟಿಸುವ ಧೀರ. ಅನುಭವ, ಅಭಿವ್ಯಕ್ತಿಗಳಲ್ಲಿ ದಾರಿ ತೋರಿದವರು.'
****************
ಕಡಂದೇಲು ಪುರುಷೋತ್ತಮ ಭಟ್ಟರವರ ಕೆಲವು ಭಾವಚಿತ್ರಗಳು
( ಚಿತ್ರ ಕೃಪೆ : ಅ೦ತರ್ಜಾಲದ ಅನಾಮಿಕ ಮಿತ್ರರು )
|
ವಳವೂರುಗುತ್ತು ರಾಮಣ್ಣ ರೈ ಸಂಸ್ಮರಣಾ ಸಮಿತಿ ವತಿಯಿಂದ ಪುರುಷೋತ್ತಮ ಭಟ್ಟರಿಗೆ ಗೃಹಸಮ್ಮಾನ
|
|
ಕು೦ಬ್ಳೆ ಸು೦ದರ್ ರಾವ್ ರವರಿ೦ದ ಸನ್ಮಾನ
|
ಕೃಪೆ : http://udayavani.com/
|
|
|